ಮೂರ್ತಿ ರಾಯರು ಅಂದರೆ ಮೊದಲಿಂದಲೂ ಮನೆತನದ ಎಲ್ಲರಿಗೂ ವಿಶೇಷ ಗೌರವ. ಸ್ನಾನ ಮುಗಿಸಿ ಮಡಿಯಲ್ಲಿ ಬಾವಿಯಿಂದ ನೀರು ಸೇದುವಾಗ, ಅಪ್ಪಿ ತಪ್ಪಿ ಸ್ನಾನವಾಗದ ಪಕ್ಕದ ಮನೆಯ ಮಗು ಬಂದು ಅವರ ಮುಟ್ಟಿದರೂ ಮಡಿಗೆ ಭಂಗ ಬಂದೀತೆಂಬ ಭಯದಿಂದ ಅದನ್ನು ಗದರಿಸಿ, ನೀರನ್ನು ತಂದು ಪೂಜೆಗೆ ಕೂರುತ್ತಿದ್ದರು. ಗಂಧ, ಚಂದನಗಳ ತೇದು, ದೇವರ ವಿಗ್ರಹಗಳಿಗೆ ಹಾಲು, ಮೊಸರಿನ ಅಭಿಷೇಕ ಮಾಡಿ, ಗಾಯಿತ್ರಿ ಪಠಣ ಮಾಡಿ ಹೊರ ಬರುವುದಕ್ಕೆ ಕಡಿಮೆ ಎಂದರೂ ಎರಡು ಘಂಟೆಗಳು!. ತಮ್ಮ ಇಚ್ಚೆಯೆಂತೆ ನಡೆದುಕೊಳ್ಳುವ ಅವರ ಹೆಂಡತಿ, ಪೂಜೆ ಮುಗಿಯುತ್ತಿದ್ದಂತೆ ಅವರಿಗೆ ತಿಂಡಿ ಮಾಡಿರುತ್ತಿದ್ದಳು. ಅವರ ಅದೃಷ್ಟ ಎನ್ನುವಂತೆ ಆರತಿಗೊಬ್ಬಳು, ಕೀರ್ತಿಗೊಬ್ಬ ಎಂದು ಎರಡು ಮುದ್ದಾದ ಮಕ್ಕಳು. ಓದಲು ಎಷ್ಟು ಬುದ್ದಿವಂತರೋ, ಅದು ಯಾರಿಗೂ ಗೊತ್ತಿಲ್ಲ. ಆದರೆ ಸಂಬಂಧಿಕರಲ್ಲಿ ಅವರ ಮಕ್ಕಳು ಬಹಳ ಬುದ್ದಿವಂತರು ಅಂತಲೇ ಪ್ರಚಾರವಿತ್ತು. ಅದು ಬಹುಶಃ ಮೂರ್ತಿ ರಾಯರ ಪ್ರಭಾವವೇ ಕಾರಣವಿರಬೇಕು.
ಕೆಲವೊಮ್ಮೆ ಹಾಗೆ. ಕೆಲವೊಂದು ವಿಷಯಗಳನ್ನು ಸುಮ್ಮನೆ ನಂಬಿಕೊಂಡು ಬಿಡುತ್ತೇವೆ ಅಲ್ಲವ? ಹಾಗೆ. ಇದ್ದ ಇಪ್ಪತ್ತು ಎಕ್ಕರೆ ತೋಟದಲ್ಲಿ ಒಳ್ಳೆ ಬೆಳೆಯಾಗುತಿತ್ತು. ಊರಲ್ಲಿ ಎಲ್ಲರಿಗಿಂತ ಶ್ರೀಮಂತರಾಗಿದ್ದರು. ತಾವು ಉಳ್ಳವರು ಎಂಬುದರ ಬಗ್ಗೆ ಅವರಲ್ಲಿ ಬಹಳೇ ಅಹಂಕಾರ ಇತ್ತು. ಹೆಂಡತಿ ಇವರು ಹೇಳಿದ ಒಂದು ಮಾತನ್ನೂ ಮೀರುವಂತಿರಲಿಲ್ಲ. ಮಕ್ಕಳು ಅಪ್ಪನ ಜೊತೆಗೆ ಮುಖ ನೋಡಿ ಮಾತಾಡಿದ್ದೆ ಹೆಚ್ಚು! ಏನಿದ್ದರೂ ಅಮ್ಮನ ಮೂಲಕ ಅಪ್ಪನಿಗೆ ತಲುಪುತ್ತಿತ್ತು. ಇಂಥ ಮೂರ್ತಿರಾಯರಿಗೆ ಒಬ್ಬಳು ತಂಗಿ ಇದ್ದಳು.ಹೆಸರು ಮುಕ್ತ.
****
ಜೋರು ಮಳೆ ಸುರಿಯುತ್ತಿರುವುದನ್ನು ನೋಡುತ್ತಾ ಕಿಡಕಿ ಪಕ್ಕ ಕುಳಿತಿದ್ದಳು ಮುಕ್ತ. ಇಪ್ಪತ್ತೈದು ವರ್ಷಗಳೇ ಉರುಳಿವೆ. ತಾನು ಹೀಗೆ ಇಷ್ಟಪಟ್ಟವನೊಡನೆ ಹೊರ ಬಂದು! ಆ ದಿನದಿಂದ ತವರಿನ ಒಂದೇ ಒಂದು ಎಳೆ ಸಂಬಂಧವೂ ಉಳಿಯಲಿಲ್ಲ. ಇಷ್ಟಕ್ಕೂ ನಾನು ಮಾಡಿದ ತಪ್ಪಾದರೂ ಏನಿತ್ತು? ಇಷ್ಟ ಪಟ್ಟ ಹುಡುಗನನ್ನ ಮದುವೆಯಾಗಲು ಎಷ್ಟು ಗೋಗರೆದರೂ ಅಣ್ಣ ಬಿಡುತ್ತಿರಲಿಲ್ಲ. ಅವನಿಗೆ ನನ್ನ ಸುಖಕ್ಕಿಂತ ಅವನ ಪ್ರತಿಷ್ಠೆಯೇ ಹೆಚ್ಚಾಗಿತ್ತು. ಇವನೂ ಕೂಡ ಮರ್ಯಾದಿಯಿಂದಲೇ ಅಣ್ಣನ ಬಳಿ ಬಂದು ನನ್ನ ಕೈಯನ್ನು ಕೇಳಿದ. ಆದರೆ ಅಣ್ಣ ಅವನಿಗೆ "ನನ್ನ ತಂಗಿ ಸಾಕುವ ಯೋಗ್ಯತೆ ನಿನಗಿದೆಯ?" ಎಂದು ಕೇಳಿ ಅವಮಾನಿಸಿ ಕಳಿಸಿಬಿಟ್ಟಿದ್ದ. ಆಗ ಹುಟ್ಟಿದ್ದು ನನಗೆ ಅಣ್ಣನ ಮೇಲೆ ಕೋಪ. ಅಲ್ಲಿಯವರೆಗೂ ಅಣ್ಣಾ ಎಂದರೆ ನನಗೂ ಬಹಳ ಇಷ್ಟ. ಅವನು ನನ್ನ ಅಣ್ಣ ಆದರೂ ಕೂಡ, ನನಗೆ ಆ ಕ್ಷಣಕ್ಕೆ ಅಣ್ಣನ ಬಿಟ್ಟು ಬದುಕಬಲ್ಲೆ, ಆದರೆ ಇವನ ಬಿಟ್ಟು ಇರಲಾರೆ ಅನ್ನಿಸಿದ್ದೇ ಮನೆ ಬಿಟ್ಟು ಹೊರಟೆನಲ್ಲ? ಹಾಗೆ ಮನೆ ಬಿಟ್ಟು ಹೋದವಳು ಈ ದಿನದವರೆಗೂ ಹಿಂತಿರುಗಿ ನೋಡಿರಲಿಲ್ಲ. ಇವನಿಗೂ ನಾನು ತವರಿಗೆ ಹೋಗುವುದು ಬೇಕಾಗಿರಲಿಲ್ಲ. ಎರಡು ವರುಷಕ್ಕೆ ಅಭಿಲಾಷ ಹುಟ್ಟಿದಳು. ಬದುಕು ಸಂತೋಷದಲ್ಲೇ ಕಳೆಯಿತು. ಎಂದೂ ಈ ಅಣ್ಣನ ಮಿಸ್ ಮಾಡಿಕೊಳ್ಳುತ್ತ ಇದೀನಿ ಅನ್ನಿಸಲೇ ಇಲ್ಲ. ಆದ್ರೆ ಇವತ್ಯಾಕೆ ಹೀಗೆ ನೆನಪಾಗುತಿದ್ದಾನೆ? ಇಷ್ಟು ವರ್ಷ ಕಾಡದ ಪಾಪ ಪ್ರಜ್ಞೆ ಇವತ್ತು ನನಗೆ ಬರುತ್ತಿದೆ? ತಪ್ಪು ಮಾಡಿ ಬಿಟ್ಟೆನ? ಹಾಗೇ ಏನೋ ಯೋಚಿಸುತ್ತಾ ಕುಳಿತಿದ್ದಳು.
ನಿನ್ನೆ ಸಂಜೆ ದೂರದ ನೆಂಟರೊಬ್ಬರು ಬಂದಿದ್ದರು. ಅಣ್ಣ ತನ್ನ ಮಗನ ಮುಂಜಿ ಮಾಡಲಿದ್ದಾನೆ. ಅದಕ್ಕೆ ತಮಗೆ ಕರೆಯ ಇದೆ ಎಂದು ಹೇಳಿದ್ದರು. ಆಗಲೇ ತಾನೇ ನನಗೆ ಸ್ತ್ರೀ ಸಹಜ ಹೊಟ್ಟೆ ಉರಿ ಶುರುವಾಗಿದ್ದು? ಯಾರೋ ದೂರದ ನೆಂಟರನ್ನು ಕರೆಯಲು ಅಣ್ಣನಿಗೆ ಪುರುಸೊತ್ತಿದೆ. ಆದರೆ ಸ್ವಂತ ತಂಗಿಯನ್ನು ಕರೆಯಲು?! ಆದರೂ ಮುಖದಲ್ಲಿ ಸಣ್ಣ ನಗು ಇಟ್ಟುಕೊಂಡೇ ಮಾತಾಡಿದ್ದೆ. ಅವರಿಗೆ ಏನು ಅನಿಸಿತೋ ಗೊತ್ತಿಲ್ಲ. ಹಿಂದೆ ಆಗಿದ್ದೆಲ್ಲ ಆಯ್ತು ಬಿಡಿ. ಹಳೇದನ್ನೆಲ್ಲ ಮರೆತು, ಅಣ್ಣ ಕರೆಯದಿದ್ದರೂ ಹೋಗಿ ಬನ್ನಿ. ನಿಮ್ಮ ಅಣ್ಣ ತಾನೇ? ಹಾಗೆಲ್ಲ ದ್ವೇಷ ಇಟ್ಟುಕೊಳ್ಳಬಾರದು. ಹಾಗೆ ಹೇಳಿ ಇನ್ನು ಹೊರಡುತ್ತೇನೆ ಅಂತ ಹೇಳಿ ಎದ್ದು ಹೋದರು. ಮನಸ್ಸು ಯೋಚನಾಮಗ್ನ ವಾಗಿತ್ತು. ಅವರು ಹೇಳಿದ ಮಾತನ್ನು ಪುನಃ ಪುನಃ ಸ್ಮರಿಸಿಕೊಂಡಳು. ಹೌದು, ನನ್ನ ಅಣ್ಣನೆ! ಅದರ ಬಗ್ಗೆ ಅನುಮಾನ ಇಲ್ಲ. ಆದರೆ ಅಣ್ಣನಿಗೂ ನಾನು ಅವನ ತಂಗಿಯೇ ಅಂತ ಅನ್ನಿಸೋದೇ ಇಲ್ಲವಾ? ಅವರನ್ನು ಅವಮಾನಿಸೋವಾಗ ಇವರು ನನ್ನ ತಂಗಿ ಗಂಡ ಆಗುವವರೆ ಅಂತ ಅನ್ನಿಸಲಿಲ್ಲವ? ಇಷ್ಟು ವರ್ಷಗಳಂತೂ ನನ್ನ ನೆನಪು ಆಗಲಿಲ್ಲ. ಆದರೆ ಈಗಾದರೂ ಒಮ್ಮೆ ಬಂದು ನನ್ನ ಕರೆಯಬಹುದಿತ್ತಲ್ಲ.ಇಲ್ಲ, ಅವನ ಕರೆಯ ಇಲ್ಲದ ಹೊಗುವುದಾ? ಇಲ್ಲ, ಎಲ್ಲ ತಿಳಿದೂ ವಿಷಯವೇ ಗೊತ್ತಿಲ್ಲದ ಹಾಗೆ ಇರುವುದಾ? ಯೋಚಿಸುತ್ತಲೇ ಇದ್ದಳು. ಯಾರೋ ಬಾಗಿಲು ತಟ್ಟಿದ ಶಭ್ದವಾಯಿತು. ಮಗಳು ಕಾಲೇಜಿಂದ ಬಂದಿದ್ದಾಳೆ ಎಂದು ತಿಳಿದು ಬಾಗಿಲನ್ನು ತೆಗೆಯಲು ಮೇಲೆದ್ದಳು.
****
ಒಳಗೆ ಬರುತ್ತಿರುವಾಗಲೇ ತಿಳಿದಿತ್ತು ಇವಳಿಗೆ ಮಗಳು ಮುನಿಸಿಕೊಂದಿದ್ದಾಳೆ ಎಂದು. ಯಾಕಮ್ಮ ಕೋಪ ಮಾಡಿಕೊಂಡಿದ್ದೀಯ ? ಅಂತ ಕೇಳಬೇಕು ಎನಿಸಿತು. ಸ್ವಲ್ಪ ಸಮಯದ ನಂತರ ಕೇಳೋಣ.ಅವಳು ಫ್ರೆಶ್ ಆಗಿ ಬರಲಿ ಎಂದು ಕಾದಳು. ಆಮೇಲೆ ಅಭಿಲಾಷನೆ ಮಾತಿಗೆ ಶುರುವಿಟ್ಟು ಕೊಂಡಳು. ಅಮ್ಮ, ಇವತ್ತು ಸುಹಾಸ್ದು ಹುಟ್ಟಿದ ದಿನ. ಅವನು ಎಲ್ಲ ಫ್ರೆಂಡ್ಸ್ ನೂ ಕರೆದಿದಾನಂತೆ. ನಂಗೆ ಒಂದು ಮಾತೂ ತಿಳಿಸಲಿಲ್ಲ. ನಾನು ಅವನು ಎಷ್ಟು ಕ್ಲೋಸ್ ಫ್ರೆಂಡ್ಸ್ ಗೊತ್ತ?ಅವನು ಕೊನೆ ಪಕ್ಷ ಹೋಗ್ತಾ ಇರುವ ಮಾತಾದರೂ ಹೇಳಬಹುದಿತ್ತು ಎಂದಳು. ಮಗಳಿಗೆ ಬೇಸರ ಆಗಿದೆ. ಆದರೂ ಅಮ್ಮ ಹೇಳಿದಳು, ಇರಲಿ ಬಿಡಮ್ಮ. ಅವನು ಕರೆಯದಿದ್ದರೆ ಏನು ? ಎಲ್ಲ ಮರೆತು, ಅವನು ನಿನ್ನ ಸ್ನೇಹಿತ ಎಂಬ ಅಭಿಮಾನದಿಂದ ನೀನು ಹೋಗು. ಮಗಳು ಕಾಲೇಜ್ ಬ್ಯಾಗನ್ನು ಸೋಫಾದ ಮೇಲೆ ಚಲ್ಲಿ ಸಿಡಿ ಮಿಡಿಗುಡುತ್ತ ರೂಮಿಗೆ ಹೋಗಿ ಬಾಗಿಲ ಕದ ಹಾಕಿಕೊಂಡಳು. ಮಗಳು ಹೋಗುವುದಿಲ್ಲ ಎಂದು ಇವಳಿಗೂ ಗೊತ್ತಿತ್ತು. ಯೋಚಿಸುತ್ತ ಕುಳಿತಳು..ಎಲ್ಲ ಮರೆಯುವುದು ಅಂದರೆ ಅಷ್ಟು ಸುಲಭಾನ? ಉತ್ತರ ಸಿಗಲಿಲ್ಲ.