
ಆದರೆ ಹೀಗೆಲ್ಲ ಅಂದುಕೊಂಡ ನಾನು ನನ್ನ ಮಗನ ಓದಿಗೆ ಯಾಕೆ ಮುಂದೆ ಬಂದು ಸಹಕರಿಸಲಿಲ್ಲ? ಇವರಿಗೆ ನಮ್ಮ ಮನೆಯಲ್ಲಿ ಇರುವ ಆಸ್ತಿಯೇ ಸಾಕು. ಇವನು ಓದಿದರೆ ಮುಂದೆ ಪೇಟೆ ಸೇರಿಕೊಂಡರೆ ನಮ್ಮ ಗತಿ ಏನು? ಅಂತ ಅವರು ಹೇಳಿದಾಗ, ಹೌದು. ಮಗ ಬುದ್ದಿವಂತ. ಓದಿಕೊಂಡರೆ ಮುಂದೆ ಒಳ್ಳೆ ಕೆಲಸ ಸಿಕ್ಕೇ ಸಿಗುತ್ತೆ. ಆಗ ಅವನು ಬೇಡ ಎಂದರೂ ನಮ್ಮ ಮಾತು ಕೇಳುವುದಿಲ್ಲ. ಅದಕ್ಕೆ ಅವನು ಮುಂದೆ ಓದುವುದು ಬೇಡ. ಇಲ್ಲೇ, ನಮ್ಮ ಕಾಲು ಬುಡದಲ್ಲೇ ಇರುವಷ್ಟು ತೋಟವನ್ನು ನೋಡಿಕೊಂಡು ಹಾಯಾಗಿ ಇರಲಿ. ಮಗ ನಮ್ಮ ಬಳಿಯೇ ಇರಲಿ ಎಂಬ ಸ್ವಾರ್ಥ ನನ್ನದೂ ಇತ್ತು. ಅದನ್ನು ಅಲ್ಲಗೆಳೆಯಲಾರೆ. ಪ್ರೀತಿಯ ಮಗ. ಅಪ್ಪ ಅಮ್ಮನಿಗೆ ನೋವಾಗಬಾರದು ಎಂದು ಹಠವನ್ನೂ ಮಾಡಲಿಲ್ಲ. ಸುಮ್ಮನಾಗಿಬಿಟ್ಟ. ಆದರೆ ನಾನು ಹಾಗೆ ಮಾಡಬಾರದಿತ್ತು.
***
ಅವರು ನಿನ್ನೆ ಕಾಲ್ ಮಾಡಿದಾಗ ಹೇಳಿದ್ದು ಸರಿಯಾಗಿ ಒಂಭತ್ತು ಘಂಟೆಗೆ ಅಲ್ಲಿರಬೇಕು. ಅವರು ಶಿಸ್ತನ್ನು ಪಾಲಿಸುವವರು. ಸ್ವಲ್ಪ ಸಮಯ ಹೆಚ್ಚೂ ಕಡಿಮೆಯಾದರೂ ನಿನ್ನನ್ನು ಒಳಗೆ ಬಿಡುವುದಿಲ್ಲ ಎಂದು!. ಅದೇ ಮಾತನ್ನು ತಲೆಯೊಳಗೆ ತುಂಬಿಕೊಂಡು ಕಣ್ಣು ಮುಚ್ಚಿದವನಿಗೆ ನಿದ್ದೆ ಎಲ್ಲಿ ತಾನೇ ಬರಬೇಕು?! ಮಗ್ಗುಲು ಬದಲಾಯಿಸುತ್ತ, ಅತಿತ್ತ ಹೊರಳಾಡುತ್ತಾ ಸ್ವಲ್ಪ ಸಮಯ ಹಾಸಿಗೆಯಲ್ಲೇ ಕಳೆದಿದ್ದಾಯಿತು. ಕಾಲ್ ಬಂದಾಗಿನಿಂದ ಏನೋ ಒಂದು ರೀತಿಯ ಆತಂಕ, ದುಗುಡ, ಭಯ!. ಏನೋ ಒಂದು ರೀತಿಯ ತಲ್ಲಣ. ಅವರೇನೋ ಹೇಳಿದ್ದಾರೆ, "ಬಿ ಬ್ರೇವ್ " ಅಂತ. ಮಲಗಿದ್ದವನಿಗೆ ಒಮ್ಮೆ ಬಾತ್ರೂಮಿಗೆ ಹೋಗುವ ಎಂದೆನಿಸಿ ಹೋಗಿ ಬಂದು ಮಲಗಿದಾಗಲೂ ಮತ್ತದೇ ಅದೇ ಯೋಚನೆಗಳು. ನಾಳೆ ದಿನ ಹೇಗಾಗುತ್ತೋ? ನಾನು ಸಮಯಕ್ಕೆ ಸರಿಯಾಗಿ ಹೋಗೋಕೆ ಆಗುತ್ತೋ ಇಲ್ವೋ? ಅವರು ಇನ್ನೇನು ಪ್ರಶ್ನೆಗಳನ್ನ ಕೇಳ್ತಾರೋ? ಹೀಗೆ ಸಾಗುತ್ತಿದ್ದ ಯೋಚನಾ ಲಹರಿಗೆ ಯಾವುದೋ ಒಂದು ಘಳಿಗೆಯಲ್ಲಿ ನಿದ್ದೆ ಒತ್ತರಿಸಿ ಬಂದು ಯೋಚನೆ ನಿಂತಿತ್ತು.
ಬೆಳಗಾಗುವುದರೊಳಗೆ ಎದ್ದು, ಸ್ನಾನ ಮುಗಿಸಿ ಮತ್ತೆ ಒಂದು ಪುಸ್ತಕ ಹಿಡಿದು ಹಾಳೆಯನ್ನು ತಿರುವತೊಡಗಿದ. ಸಮಯ ಈಗಾಗಲೇ ಆರು ಘಂಟೆ! ಇನ್ನು ಕೇವಲ ಮೂರು ಘಂಟೆಗಳಲ್ಲಿ ನಾನು ಅಲ್ಲಿರಬೇಕು. ಹಾಗಂದುಕೊಳ್ಳುತ್ತಲೇ ಬ್ಯಾಗಿನಲ್ಲಿ ರಾತ್ರಿ ಜೋಪಾನವಾಗಿ ಫೈಲಿನಲ್ಲಿ ಸೇರಿಸಿಟ್ಟ ರೆಸುಮನ್ನು ನೋಡಿಕೊಂಡ. ಗೆಳೆಯರು, ನಿನ್ನ ರೆಸುಮಿನಲ್ಲಿ ಇರುವುದರ ಬಗ್ಗೆಯೇ ಪ್ರಶ್ನೆ ಕೇಳುತ್ತಾರೆ ಎಂದು ಹೇಳಿದ್ದು ಅವನಿಗೆ ಜ್ಞಾಪಕವಾಗಿದೆ. ತಿರಿಸಿ ಮುರಿಸಿ ಹೇಗೆ ನೋಡಿದರೂ ಎಲ್ಲಾ ತನಗೆ ತಿಳಿದಿರುವುದೇ ಎಂದು ಅವನಿಗನಿಸುವುದು. ಇದು ಬಹುಷಃ ನಾನು ಹೋಗುತ್ತಿರುವುದು ಐದನೇ ಸಾರಿ. ಅಮ್ಮ ಹೇಳುತ್ತಾಳೆ, ಪ್ರತೀ ಭಾರಿಯೂ ನಾನು ಹೋಗುವಾಗ ಒಂದು ತೆಂಗಿನ ಕಾಯಿ ತೆಗೆದಿಟ್ಟಿದ್ದೇನೆ, ನಿನಗೆ ಒಳ್ಳೆಯದಾಗುತ್ತದೆ ಎಂದು. ಹಾಗಾದ್ರೆ ಹಿಂದೆ ದೇವರ ಹೆಸರಿನಲ್ಲಿ ತೆಗೆದಿಟ್ಟ ನಾಲ್ಕೂ ತೆಂಗಿನಕಾಯಿಗಳಿಗೆ ಅರ್ಥವೇ ಇಲ್ಲವೆ? ಪ್ರಶ್ನೆ ಕೇಳುತಿತ್ತು ಮನಸ್ಸು. ಕೆಲವೊಂದು ವಿಷಯಗಳನ್ನು ಕೇವಲ ನಂಬಿಕೆ ಎಂದು ಅಂದುಕೊಂಡು ಸುಮ್ಮನಿರುವುದೇ ಒಳಿತು. ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾ, ಉತ್ತರ ಹುಡುಕುತ್ತ ಹೋದಂತೆ ತಲೆ ಕೆಡುತ್ತದೆ ವಿನಃ ಸಮಂಜಸ ಉತ್ತರ ದೊರೆಯುವುದಿಲ್ಲ. ವಿಷಾದದ ನಗು ಹಾದು ಹೋಯಿತು ಅವನ ತುಟಿಯಲ್ಲಿ.
ಹೇಳಿ ಕೇಳಿ ಬೆಂಗಳೂರಿನ ಹೊರವಲಯದಲ್ಲಿ ಗೂಡು ಕಟ್ಟಿರುವುದು ನಾನು. ಇಲ್ಲಿಂದ ನಾನು ತಲುಪಬೇಕಾದ ಜಾಗಕ್ಕೆ ಹೋಗುವುದಕ್ಕೆ ಎರಡು ಘಂಟೆಗಳ ಪಯಣ. ನಡೆದುಕೊಂಡು ಬಂದು ಬಸ್ ಸ್ಟ್ಯಾಂಡಿನಲ್ಲಿ ಕುಳಿತವನಿಗೆ, ತನ್ನಂತೆ ನೂರಾರು ಜನ ಬಸ್ಸಿಗಾಗಿ ಕಾಯುತ್ತಿರುವುದನ್ನು ಕಂಡು, ದೇವರೇ! ಇವರೆಲ್ಲ ಬೇರೆ ಬಸ್ಸಿಗಾಗಿ ಕಾಯುತ್ತಿರಲಿ. ನಾನು ಹೋಗುವ ಬಸ್ಸು ಖಾಲಿ ಇದ್ದರೆ ಕುಳಿತುಕೊಂಡು ಹೋಗಬಹುದು ಎಂದು ಸಣ್ಣ ಪ್ರಾರ್ಥನೆ ಸಲ್ಲಿಸಿದ. ಅಬ್ಬ! ಈ ಬೆಂಗಳೂರಿನಲ್ಲಿ ಒಂದು ಜಾಗದಿಂದ ಮಾತ್ತೊಂದು ಜಾಗಕ್ಕೆ ಹೋಗಲು ಎಷ್ಟೆಲ್ಲಾ ಕಷ್ಟ ಪಡಬೇಕು! ನಮ್ಮ ಊರಲ್ಲಾಗಿದ್ದರೆ ನಡೆದುಕೊಂಡೇ ಹೋಗಿ ಬಂದು ಬಿಡಬಹುದಾಗಿತ್ತು. ಹೋಗಲಿ, ಸಾದಾ ಬಸ್ಸು ಬೇಡ. ಏ. ಸಿ ಬಸ್ಸು ಹತ್ತಿ ಹೋಗೋಣ ಅಂದುಕೊಂಡರೆ ಅಲ್ಲಿ ಸಾದಾ ಬಸ್ಸಿಗೆ ಕೊಡುವ ಮೂರರಷ್ಟು ಹಣಕೊಟ್ಟು ಹೋಗಬೇಕು. ಅದೇ ದುಡ್ಡು ಇದ್ದರೆ ಸಂಜೆ ತರಕಾರಿ ತರಲು ಆದರೆ ಅಷ್ಟೇ ಆಯಿತು ಎನ್ನುವ, ಎಸಿ ಬಸ್ಸನ್ನು ಹತ್ತಲು ಬಿಡದ ಮನಸ್ಸು. ಆದರೆ ಇಲ್ಲಿ ಕೆಲವರು ದಿನವೂ ಎಸೀ ಬಸ್ಸಲ್ಲೇ ಹೋಗಿಬರುತ್ತಾರೆ. ಅವರಿಗೆಲ್ಲ ಎಷ್ಟು ಸಂಬಳವಿರಬಹುದು? ಅಥವ ಸಂಬಳ ಹೆಚ್ಚು ಇಲ್ಲದಿದ್ದರೂ ಐಶರಾಮಿಯಾಗಿ ಇರುತ್ತಿರಬಹುದೇ? ಅಥವ ಸಮಯಕ್ಕೆ ಸರಿಯಾಗಿ ಹೋಗಬಹುದು ಎಂದು ಅದನ್ನು ಅವಲಂಬಿಸಿಬಹುದೇ? ತುತ್! ನಾನು ಅದ್ಯಾವಾಗ ಇವರ ತರಹ ಮುಲಾಜಿಲ್ಲದೆ ದುಡ್ಡು ಖರ್ಚು ಮಾಡಿಕೊಂಡಿರುವುದು? ಒಂದಕ್ಕೆ ಹೆಚ್ಚು ಖರ್ಚು ಮಾಡುವಾಗ, ಈ ದುಡ್ಡು ಉಳಿದರೆ ಇನ್ನೊಂದಕ್ಕೆ ಬರುತ್ತಲ್ಲವೆ ಎಂದು ಅಂದುಕೊಳ್ಳುವ ನನ್ನ ಮನಸ್ಸು ಬದಲಾಗುವುದು ಯಾವಾಗ? ಈ ನನ್ನ ಲೆಕ್ಕಾಚಾರದ ಜೀವನಕ್ಕೆ ಕೊನೆಯಲ್ಲಿ, ಯಾವಾಗ?
ನಿಟ್ಟುಸಿರು ದೇಹದಿಂದ ಹೊರಕ್ಕೆ ಜಾರುತ್ತಿದಂತೆ ಬಂದಿತ್ತು ಒಂದು ಬಸ್ಸು. ಸಮಯ ಈಗಾಗಲೇ ಆರು ಮೂವತ್ತು. ಬಸ್ಸು ಬಂದಿದ್ದೇ ಹಿಂದೂ ಮುಂದು ನೋಡದೆ ಹತ್ತಿಬಿಟ್ಟ. ಹೇಗಾದರೂ ಮಾಡಿ ಇವತ್ತು ಕೆಲಸ ಗಿಟ್ಟಿಸಲೇ ಬೇಕು. ಊರಿನ ಜನಕ್ಕೆ ನಾನೂ ಒಂದು ಮನುಷ್ಯ ಆಗಬಲ್ಲೆ ಎಂದು ತೋರಿಸಬೇಕು. ಬಡವರಾದರೂ ನಾವು ಮರ್ಯಾದೆಯಿಂದ ಬದುಕುವವರು ಎಂದು ಅಂದುಕೊಳ್ಳುವಾಗಲೇ ಏನೋ ಒಂದು ತೀವ್ರ ತರ ಅಸಹನೀಯ ನೋವಾದ ಅನುಭವವಾಯಿತು. ಬಾಯೆಲ್ಲಾ ಕಹಿಯಾದಂತೆನಿಸಿ ಯೋಚನಾಲಹರಿಯನ್ನು ಬೇರೆಕಡೆಗೆ ತಿರುಗಿಸಲು ಪ್ರಯತ್ನ ಪಡುತ್ತಿರುವಾಗಲೇ, ಯಾರೋ ಭುಜ ತಟ್ಟಿದ ಅನುಭವವಾಗಿ ತಲೆ ಎತ್ತಿದರೆ, ವಯಸ್ಸಾದ ಒಂದು ತಾತ ಸೀಟ್ ಬಿಟ್ಟುಕೊಡುವಂತೆ ಕೇಳಿ ನಿಂತಿದ್ದರು. ಅವರಿಗೆ ಸೀಟು ಬಿಟ್ಟು ಕೊಟ್ಟು ಕಂಭ ಹಿಡಿದು ನಿಂತ ಇವನಿಗೆ, ಜೀವನವೆಲ್ಲ ಬರೀ ಇನ್ನೊಬ್ಬರಿಗಾಗಿ ತ್ಯಾಗ ಮಾಡುವುದರಲ್ಲೇ ಆಯಿತು ಎಂದೆನಿಸಿ ಸುಮ್ಮನಾದ. ಕಂಡಕ್ಟರ್ ಬಂದು ಟಿಕೆಟ್ ಕೇಳಿದಾಗ ಹದಿಮೂರು ರೂಪಾಯಿಯ ಟಿಕೆಟಿಗೆ ಚಿಲ್ಲರೆ ಇಲ್ಲದೆ ಕೊಟ್ಟ ಹದಿನಾಲ್ಕು ರೂಪಯಿಗಳನ್ನು ಬ್ಯಾಗಿನಲ್ಲಿ ಇಳಿಸಿಕೊಂಡು ಟಿಕೆಟ್ ಕೊಟ್ಟು ಹೊರಟವನನ್ನು ಒಂದು ರೂಪಾಯಿ ವಾಪಸ್ಸು ಕೊಡಿ ಎಂದು ಕೇಳಲು ಮನಸ್ಸಾಗಲಿಲ್ಲ.
***
ಅಪ್ಪ, ಅಮ್ಮ ಎಲ್ಲರೂ ಎಷ್ಟೊಂದು ಒಳ್ಳೆಯ ಜನ. ಊರಲ್ಲಿ ಅಪ್ಪನ ಕಂಡರೆ ಎಲ್ಲರಿಗೂ ಎಷ್ಟೊಂದು ಗೌರವ, ನಂಬಿಕೆ. ಆದರೆ

***
ತಾನು ಇಳಿದುಕೊಳ್ಳುವ ಜಾಗ ಬಂದಲ್ಲಿ ಸಮಯ ಸರಿಯಾಗಿ ಎಂಟು ಮುಕ್ಕಾಲು. ಗೇಟ್ ನ್ನು ದಾಟಿ ಒಳಗೆ ಹೋಗುವಾಗ ಅಮ್ಮನ ಪ್ರೀತಿಯ ನುಡಿಗಳು, ಅಪ್ಪನ ಅಸಹಾಯಕತೆ, ಕೊನೆಯ ಸಾರಿ ಊರಿನಲ್ಲಿರುವ ಮನೆಯನ್ನು ನೋಡಿದ ದೃಶ್ಯ, ಹಾಗೂ ದೇವರಲ್ಲಿ ಅಮ್ಮ ಈ ಭಾರಿಯಾದರೂ ನಾನು ಇಂಟರ್ವ್ಯೂ ನಲ್ಲಿ ಪಾಸ್ ಆಗಲಿ ಎಂದು ದೇವರಲ್ಲಿ ಬೇಡಿ ತೆಗೆದಿಟ್ಟ ತೆಂಗಿನಕಾಯಿ ಎಲ್ಲದರ ನೆನಪು ಒಂದರ ಹಿಂದಂತೆ ಒಂದು ಬರತೊಡಗಿದವು....